ಕಾಂತಾರ ಶೂಟಿಂಗ್ ನಲ್ಲಿ ರಿಷಬ್ ಶೆಟ್ಟಿ ‘ದೈವ ಆವಾಹನೆ’ ಆಗಿ ಕುಸಿದು ಬಿದ್ದಿದ್ರಾ? ರಾಜ್ ಶೆಟ್ಟಿ ಹೇಳಿದ್ರು ಅಸಲಿ ಸತ್ಯ

ಕಾಂತಾರ ಚಿತ್ರ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದೆ. ಕನ್ನಡ ನಾಡಿನ ಕಲೆಯನ್ನು ಬೆಳ್ಳಿ ಪರದೆಯ ಮೇಲೆ ತರುವಲ್ಲಿ ಚಿತ್ರತಂಡ ಗೆದ್ದಿದೆ. ಇಂತಹ ಚಿತ್ರಗಳಿಗೂ ಜನರಿದ್ದಾರೆ ಎಂಬುದನ್ನು ಕಾಂತಾರ ಸಾಬೀತುಪಡಿಸಿದೆ. ಚಿತ್ರದ ಕೊನೆಯ 20 ನಿಮಿಷದ ಕ್ಲೈಮ್ಯಾಕ್ಸ್ ದೃಶ್ಯಾವಳಿ ಚಿತ್ರ ನೋಡಿದ ನಂತರವೂ ವೀಕ್ಷಕರ ತಲೆಯಲ್ಲಿ ಗಿರ್ ಎನ್ನುವಂತೆ ಕುಳಿತುಬಿಡುತ್ತದೆ. ಅಷ್ಟರಮಟ್ಟಿಗೆ ದೈವವನ್ನು ಆವಾಹಿಸಿಕೊಂಡವರಂತೆ ರಿಷಭ್ ಅಭಿನಯಿಸಿದ್ದಾರೆ. ಇದೆಲ್ಲದರ ನಡುವೆ ನಿಜವಾಗಲೂ ಶೂಟಿಂಗ್ ವೇಳೆ ಅವರ ದೇಹಕ್ಕೆ ದೈವ ಆವಾಹಿಸಿ ಅವರು ಕುಸಿದು ಬಿದ್ದಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ.

ಹೀಗೆ ಜನರಿಗೆ ಅನಿಸಲು ಮುಖ್ಯ ಕಾರಣ ರಿಷಬ್ ನಿಜವಾಗಿಯೂ ದೈವ ಬಂದಂತೆ ಚಿತ್ರದಲ್ಲಿ ಕಾಣುತ್ತಾರೆ. ನಿಜವೋ ನಟನೆಯ ತಿಳಿಯುವುದೇ ಇಲ್ಲ. ಹೀಗಾಗಿ ಅವರಿಗೆ ನಿಜವಾಗಿಯೂ ದೈವ ಆವಾಹನೆ ಆಗಿತ್ತ? ಅವರು ಚಿತ್ರೀಕರಣದ ಮೇಲೆ ಕುಸಿದು ಬಿದ್ದಿದ್ದರೆ? ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಮಾಧ್ಯಮದವರ ಈ ಪ್ರಶ್ನೆಗೆ ರಿಷಬ್ ಸ್ನೇಹಿತರಾದ ರಾಜ್ ಬಿ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ರಾಜ್ ದೈವದ ಕುಣಿತವನ್ನು ರಿಷಭ್ ಅವರಿಗೆ ಹೇಳಿಕೊಟ್ಟಿದ್ದಲ್ಲದೆ ಇಂತಹ ನೃತ್ಯದ ದೃಶ್ಯಗಳನ್ನು ಅವರೇ ನಿರ್ದೇಶಿಸಿದ್ದರು.

ಅವರ ಮೈ ಮೇಲೆ ದೈವ ಆವಾಹನೆ ಆಗಿ ಅವರು ಕುಸಿದು ಬಿದ್ದಿದ್ದರೆ ಎಂಬ ಪ್ರಶ್ನೆಗೆ ರಾಜ್ ಬಿ ಶೆಟ್ಟಿ ಅವರು ಇದೀಗ ಪ್ರತಿಕ್ರಿಯಿಸಿದ್ದಾರೆ. ಇಂತಹ ಪ್ರಶ್ನೆಗಳಿಗೆ ಉತ್ತರಿಸಿರುವ ರಾಜ್ ಬಿ ಶೆಟ್ಟಿ ಅವರು “ಅದರ ಬಗ್ಗೆ ನನಗೆ ತಿಳಿದಿಲ್ಲ, ನೀವು ರಿಷಬ್ ಅವರನ್ನು ಕೇಳಿ. ಬಂದಿತ್ತಾ ಅಥವಾ ಇಲ್ಲವಾ ಎಂದು ಅವರು ಮಾತ್ರ ಹೇಳಲು ಸಾಧ್ಯ. ಅದು ನನಗೆ ಹೇಗೆ ತಿಳಿಯಬೇಕು. ಅಲ್ಲದೆ ಇಂತಹ ವಿಚಾರಗಳನ್ನು ಇಟ್ಟುಕೊಂಡು ನಮಗೆ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುವ ಮನಸ್ಸಿಲ್ಲ” ಎಂದು ಅವರು ತಿಳಿಸಿದ್ದಾರೆ. ಕಾಂತಾರ ಚಿತ್ರವು ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಚಿತ್ರಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ.

Comments (0)
Add Comment