ನಂದಿಯ ಕಿವಿಯಲ್ಲಿ ಬೇಡಿಕೊಂಡ ಬೇಡಿಕೆಗಳು ನೇರವಾಗಿ ಪರಶಿವನಿಗೆ ತಲುಪುತ್ತದೆ ಅನ್ನುತ್ತಾರೆ ಯಾಕೆ ಅದರ ಹಿಂದಿನ ಕಾರಣಗಳೇನು?

497

ಪುರಾಣದಲ್ಲಿ ನಾವು ಎಲ್ಲರೂ ಓದಿ ತಿಳಿದ ಹಾಗೆ ನಂದಿ ಮತ್ತು ಶಿವನ ಸಂಬಂಧ ಭಕ್ತ ಮತ್ತು ದೇವರ ಸಂಬಂಧ ಯಾವ ಮಟ್ಟಿಗೆ ಇರಬೇಕು ಎಂದು ಸಾರುತ್ತದೆ. ಶಿವನ ಚರಿತ್ರೆಯಲ್ಲಿ ನಂದಿಯ ಪಾತ್ರ ಮಹತ್ವ ಮತ್ತು ಶಿವನ ಸಾನಿಧ್ಯದಲ್ಲಿ ನಂದಿಗೆ ಅದರದ್ದೇ ಆದ ಸ್ಥಾನವನ್ನು ಕಲ್ಪಿಸಿದೆ. ಆದರೆ ಆ ಸ್ಥಾನ ಸುಮ್ಮನೆ ಸಿಕ್ಕಿಲ್ಲ ಬದಲಾಗಿ ನಂದಿಯ ಭಕ್ತಿಗೆ ಒಲಿದು ಪರಶಿವನು ನಂದಿಗೆ ಕೊಟ್ಟ ವರದಾನ ಇದು . ಹಾಗಾದರೆ ಆ ಪರಮ ಪವಿತ್ರ ಸ್ಥಾನದಲ್ಲಿರುವ ನಂದಿಯ ಕಿವಿಯ ಮುಖಾಂತರ ಯಾವುದೇ ರೀತಿಯ ನೋವನ್ನು ಕಷ್ಟಗಳನ್ನು ಹೇಳಿಕೊಂಡಾಗ ಅದು ಶಿವನಿಗೆ ನೇರವಾಗಿ ತಲುಪುತ್ತದೆ ಮತ್ತು ಶಿವನು ಅದಕ್ಕೆ ಪರಿಹಾರ ದೊರಕಿಸುವ ಎಂಬ ಪ್ರತೀತಿ ಇದೆ.

ಹಾಗಾದರೆ ಈ ಒಂದು ಆಚರಣೆ ಯಾವಾಗಿನಿಂದ ಶುರುವಾಯಿತು ಏತಕ್ಕಾಗಿ ಶುರು ಆಯಿತು ಬನ್ನಿ ತಿಳಿಯೋಣ. ಸತಿಯನ್ನು ಕಳೆದುಕೊಂಡ ಪರಶಿವನು ಜೀವನದಲ್ಲಿ ವೈರಾಗ್ಯವನ್ನು ಹೊಂದಿ ಜಗದ ಜಾಂಜಾಟವೆ ಬೇಡ ಎಂದು ಘೋರ ತಪಸ್ಸಿಗೆ ಕುಳಿತ ಸಮಯ ಅದು. ಗುಹೆಯೊಳಗೆ ಹೋಗಿ ಸಮಾಧಿ ರೂಪದಲ್ಲಿ ತಪಸ್ಸು ಆಚರಿಸಲು ಆರಂಭಿಸಿದಾಗ ಯಾರ ಮಾತನ್ನೂ ಕೇಳಲಿಲ್ಲ. ಅದೆಷ್ಟೋ ವರುಷಗಳ ತಪಸ್ಸು ಆದರೆ ನಂದಿ ಮಾತ್ರ ತನ್ನ ಪ್ರಭುವನ್ನು ಬಿಟ್ಟು ಹೋಗಲಿಲ್ಲ. ತನ್ನ ಪ್ರಭು ಬಂದೆ ಬರುತ್ತಾರೆ ಎಂದು ಅದೇ ಗುಹೆಯ ಹೊರಗೆ ಕಾದು ಕುಳಿತುಕೊಳ್ಳುತ್ತಾನೆ. ಅದೆಷ್ಟೋ ಸಾವಿರ ವರ್ಷಗಳೇ ಕಳೆದು ಹೋಗುತ್ತದೆ. ನಂದಿ ಕಲ್ಲಿನ ರೂಪ ತಾಳಿ ಪರಶಿವನು ಬಂದು ಎಬ್ಬಿಸುವ ತನಕ ನಾನು ಇಲ್ಲಿಂದ ಏಳುವುದಿಲ್ಲ ಎಂದು ಹಠ ಹಿಡಿದು ಕುಳಿತು ಪರಶಿವನ ಧ್ಯಾನದಲ್ಲಿ ಮಗ್ನನಾಗುತ್ತಾನೆ.

ಯಾವುದೇ ಚಳಿ ಗಾಳಿ ಬಿಸಿಲಿಗೂ ಲೆಕ್ಕಿಸದೆ ಅಲ್ಲೇ ಇರುವ ಸಂದರ್ಭದಲ್ಲಿ ಸತಿಯ ಮರುಜನ್ಮ ಪಾರ್ವತಿಯ ರೂಪದಲ್ಲಿ ಆಗುತ್ತದೆ. ಹೀಗೆ ಕಾಲಾಂತರದಲ್ಲಿ ಶಿವನು ಜಗದ ಕಲ್ಯಾಣಕ್ಕಾಗಿ ತನ್ನ ವೈರಾಗ್ಯ ಬಿಟ್ಟು ಗುಹೆ ಹೊರಗೆ ಬಂದಾಗ ನಂದಿಯನ್ನು ಕಂಡು ಪ್ರಸನ್ನ ನಾಗಿ. ಇನ್ನು ಮುಂದಕ್ಕೆ ಜಗತ್ತಿನಲ್ಲಿ ನಿನ್ನನ್ನು ನನ್ನ ಸನ್ನಿದಾನದ ಎದುರು ಭಾಗದಲ್ಲಿ ಪೂಜಿಸಲಾಗುವುದು. ನಿನ್ನ ಕಿವಿಯ ಮೂಲಕ ಯಾರೇ ಏನೇ ಬೇಡಿಕೊಂಡರು ಈ ಪರಶಿವನು ಅವರಿಗೆ ಅನುಗ್ರಹಿಸುತ್ತಾನೆ ಎಂದು ವರದಾನ ನೀಡುತ್ತಾರೆ. ಇದೆ ಕಾರಣಕ್ಕೆ ಶಿವನ ಆಲಯದಲ್ಲಿ ನಂದಿಯನ್ನು ಹೊರಗೆ ಶಿವನಿಗೆ ಮುಖ ಮಾಡಿ ಪೂಜಿಸಲಾಗುವುದು. ಭಕ್ತರು ಬಂದು ನಂದಿಯ ಕಿವಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ.

Leave A Reply

Your email address will not be published.